ಸೋಮವಾರ, ಅಕ್ಟೋಬರ್ 24, 2022

ಎಲ್ಲೆಲ್ಲೂ ನೀನೆ   !!!


ಮನೆಯ ಕಿಟಕಿ ಬಾಗಿಲು ತೆರೆಯುವಂತಿಲ್ಲ 

ನೀನು ಒಳಸೇರುವೆ ।।

ಕೈ ಕಾಲು ಮುಖ ತೊಳೆಯುವಂತಿಲ್ಲ 

ಮನೆಯೆಲ್ಲಾ ತಿರುಗುವೆ ।।


ನಿನಗೆ ಬೇಕೆಂದ ಕಡೆ ಹೋಗುವೆ 

ಕಂಡದೆಲ್ಲಾ ತಿನ್ನುವೆ ।।

ಎಲ್ಲೆಂದರಲ್ಲಿ ಕೂರುವೆ , ಎಲ್ಲೆಂದರಲ್ಲಿ ಮಲಗುವೆ 

ಕರ್ಕಷವಾಗಿ ಕೂಗುವೆ ।।


ನಿನ್ನ ಆಯಸ್ಸೇ ಕೆಲವು ದಿನ , ಆದರೆ 

ನಿನ್ನ ಆರ್ಭಟ ಮತ್ತದರ ಪರಿಣಾಮಗಳು 

ಹಲವು ದಿನ ।।


ನೀನು ಹೋದರು , ನಾನು ಖುಷಿಪಡುವಂತಿಲ್ಲ 

ಏಕೆಂದರೆ , ಹೋಗುವ ಮುನ್ನ ನೀ ಖಚಿತವಾಗಿ 

ಸೃಷ್ಟಿಸಿರುವೆ ನಿನ್ನಂತಹ  ಹಲವರನ್ನ ।।


ಹೀಗಿರುವಗ್ಗ ನಾ ಏನು ಮಾಡಲಿ 

ಹೇಗೆ ನಿನ್ನಿಂದ ನಾನು ಮುಕ್ತಿ ಹೊಂದಲಿ ।।


ನಿನ್ನ ಕಾಟಕ್ಕೆ ಕೊನೆಯೆಂದೆಣಿಸಿ 

ಸೋತಿಹೆ ನಾನು  ಇಂದು|

ನಿನ್ನಿಂದ ನಮ್ಮನೆಲ್ಲ ಕಾಪಾಡುವ 

ಆಪದ್ಭಾಂಧವ   , ಅನಾಥರಕ್ಷಕ 

ಎಲ್ಲಿರುವನೋ , ಬರುವನೋ ಇನ್ನೆಂದು !!!



(ಈ ವಿಡಂಬ ಕಾವ್ಯದ ಮಾರ್ಮಿಕತೆಯನ್ನು ಅರಿತವರೇ ಕೋವಿದರು)


ಸ್ವರ್ಣ ಕಿರಣ್ 

ಮನೆ ಸಂಖ್ಯೆ ೪೨೧. 



 

ಗುರುವಾರ, ಜೂನ್ 13, 2019

ಜಂಬೋ , ಕೊಶಿ

Ko ಜಂಬೋ , ಕೊಶಿ s
ಒಂದು ದಿನ ಜಂಬೋ ಆನೆ ತನ್ನ ದೊಡ್ಡ  ಹೊಟ್ಟೆಯನ್ನು ತುಂಬಿಸಲು ಮನೆಯಿಂದ ಹೊರಟಿತು . ಪ್ರತಿ ದಿನ ಕಾಡಿನ ಸೊಪ್ಪು ಸದೆ ತಿಂದು ತಿಂದು ಬೇಜಾರಾಗಿದ್ದ ಜಂಬೊ ಇಂದು  , ಹಳ್ಳಿಯ ಕಡೆ ಹೋಗಿ ಆಹಾರ ಹುಡುಕುವ ಯೋಜನೆ ಮಾಡಿದ್ದ . ಅದರಂತೆ ಕಾಡಿನ ದಾರಿ ಸವೆದು ಹಳಿಯ ಬಯಲು ದಾಟಿ , ಒಂದು ಕಬ್ಬಿನ ಗದ್ದೆಯನ್ನು ಕಂಡು , ಕಣ್ಣರಳಿ ಜಂಬೊ ಗದ್ದೆಗೆ ಲಗ್ಗೆ ಹಾಕಿದ

ರಸವತ್ತಾಗಿ ಬೆಳೆದು ನಿಂತಿದ್ದ , ಕಬ್ಬನ್ನು ತನ್ನ ಸೊಂಡಿಲಿನಿಂದ ಮುರಿದು , ಜಗಿದು , ಚೆನ್ನಾಗಿ ಅದರ ರಸ ಸವಿದು ಸಂಭ್ರಮಿಸಿದ .ಮನಸ್ಫೋರ್ತಿಯಾಗಿ ಕಬ್ಬನ್ನು ಪೂರೈಸಿದ ಬಳಿಕ , ಅಲ್ಲೇ ಹತ್ತಿರದಲ್ಲಿದ್ದ ಕೆರೆಯಲ್ಲಿ ತೃಪ್ತಿಯಾಗುವಷ್ಟು ನೀರು ಕುಡಿದ .ತಿಂದು ಕುಡಿದು ಆದ ಮೇಲೆ ಹೊಟ್ಟೆ ಬಾರವಾಗಿ , ಹಾಗೆ ನಿದ್ದೆ ತೇಲಿಸಲು , ಸುತ್ತ  ವಿಶ್ರಾಂತಿಗಾಗಿ ಕಣ್ಣು ಹಾಯಿಸಿದ .ಅಲ್ಲೇ ಸ್ವಲ್ಪ ದೊರರಾದಲ್ಲಿ ಒಂದು ದೊಡ್ಡ ಮರ ಕಾಣಲು, ಅದರ ಬಳಿ ಮೆಲ್ಲನೆ ಹೆಜ್ಜೆ ಹಾಕಿ , ಹೊರಲಾರದ ಹೊಟ್ಟೆಯನ್ನು ಹೊತ್ತು , ಹೇಗೋ ಮರವನ್ನು ತಲುಪಿ , ಮರದ ಕೆಳಗೆ ವಿಶ್ರಾಂತಿಗಾಗಿ  ನಿಂತ . ಸ್ವಲ್ಪ ಸಮಯದ ಬಳಿಕ  "ಸಹಾಯ ಮಾಡಿ,ದಯವಿಟ್ಟು ಯಾರಾದರು ಇದ್ದಾರ ಸಹಾಯ ಮಾಡಿ" ಎಂದು ಒಂದು ಸಣ್ಣ ಧನಿ ಅಂಗಲಾಚುವುದುಕಿವಿಗೆ ಬಿತ್ತು . ತಕ್ಷಣ ನಿದ್ದೆ ಯಿಂದ ಎಚ್ಚೆತ್ತ ಜಂಬೊ , ಮರದ ಸುತ್ತ ಒಂದು ಪ್ರದಕ್ಶಿಣೆ ಬರಲು ಆಗ ಧ್ವನಿ ಮರದ ಕೆಳಗಿನ ಸಣ್ಣ ಪೊಟರೆಯಿಂದ ಬರುವುದು ಅರಿವಾಗಿ , ಯಾರದು ಪೊಟರೆಯ ಹಿಂದೆ ಎಂದು ಕೇಳಿತು. ಆಗ ಪೊಟರೆಯಿಂದ "ನಾನು ಕೊಶಿ, ಮೊಲ . ಕೇಡಿ ತೋಳವೊಂದು, ನನ್ನನ್ನು ನನ್ನ ಮನೆಯಲ್ಲೇ ಕೊಡ್ಡಿ ಹಾಕಿದೆ. ನಾನು ಒಳಗೆ ಇರುವ ಸಮಯ ನೋಡಿ , ಮುಂದಿನ ಬಾಗಿಲಿಗೆ ದೊಡ್ಡ ಕಲ್ಲೊಂದನ್ನು ಎಳೆದು ಹೋಗಿದೆ . ಅದನ್ನು ನನ್ನ ಕೈಯಿಂದ, ತೆಗೆಯುವುದು ಇರಲಿ , ಅಲ್ಲಾಡಿಸುವುದು ಸಾಧ್ಯವಿಲ್ಲ . ಹೇಗಾದರೂ ನನನ್ನು ಉಳಿಸಿ ಎಂದು ಕೊಶಿ ಬೇಡಿಕೊಂಡಿತು. ಬಾರಿ ಗಾತ್ರದ ಜಂಬೊ , ತನ್ನ ಎದುರಿಗಿದ್ದ ದೊಡ್ಡ  ಕಲ್ಲನು !! ಒಂದೇ ಸಾಲಕ್ಕೆ ತನ್ನ ಎಡ ಕಾಲಿನಿಂದ ಒದ್ದು , ಪೊಟರೆಯ ಬಾಗಿಲು ತೆರೆಯಿತು . ತಕ್ಷಣ ಒಳಗಿದ್ದ ಕೊಶಿ ಆಚೆಗೆ ಹಾರಿ , ತನನ್ನು ಕಾಪಾಡಿದ ಜಾಂಬೋವಿಗೆ ಧನ್ಯವಾದ ಹೇಳಿತು. ಅಂದಿನಿಂದ  ಹಳ್ಳಿಗೆ ಬಂದಾಗಲೆಲ್ಲ ಜಂಬೊ ಕೋಶೀಯ ಜೊತೆ ಅಡ್ಡಾಡುತ್ತಿತ್ತು . ಕೊಶಿಗೆ ಕಾಡು ನೋಡುವ ಆಸೆ ಅದಾಗಲೆಲ್ಲ , ಜಂಬೊ ಅದನ್ನು ತನ್ನ ಮೇಲೆ ಕೂರಿಸಿಕೊಂಡು ಕಾಡಿನ ಸವರಿ ಮಾಡಿಸುತಿತ್ತು . ಕೊಶಿ ಮತ್ತು ಜಂಬೊ ಒಳ್ಳೆಯ ಸ್ನೇಹಿತರಾಗಿ , ಬದುಕಿದವು 

ಶುಕ್ರವಾರ, ನವೆಂಬರ್ 3, 2017

NaughtyMonkey

ದೊಡ್ಡ ಕಾಡಿನ ಶಾಲೆಗೆ ಉದ್ದ ಕತ್ತಿನ ಜಿರಾಫೆ ಟೀಚರ್ ! ಆನೆ , ಸಿಂಹ , ಹುಲಿ, ಕರಡಿ, ಮಂಗ , ನರಿ, ತೋಳ ,ಜಿಂಕೆ ಹೀಗೆ ಎಲ್ಲ ಹತ್ತು ಹಲವು ಪ್ರಾಣಿ- ಪಕ್ಷಿಗಳ ಮರಿಗಳು ಒಟ್ಟಿಗೆ ಒಂದೇ ಶಾಲೆಯಲ್ಲಿ ಕಲಿಯುತ್ತಿದವು. ಈಗ ಹೇಳುವ ಕಥೆ ಶಾಲೆಯಲ್ಲಿ ಕಲಿಯುತಿದ್ದ ಮಹಾ ಗರ್ವಿ ಮಂಗನದು .  ಇತರ ಪ್ರಾಣಿಗಳನ್ನು ಸದಾ ಕೆದುಕುವುದು , ಉಪದ್ರ ಮಾಡುವುದು ಇದೆ ಅದರ ದಿನ ನಿತ್ಯದ ಕೆಲಸ . ತಾನು ಎಲ್ಲರಿಗಿಂತ ಮಿಗಿಲಿನವನು ಎಂಬ ಭ್ರಮೆ ಅದಕ್ಕೆ. ಮಂಗನ

ಮಳೆಗಾಲದ ದಿನ . ಕಾಡಿನಲ್ಲಿ ಬಿಡದ ಹಾಗೆ ಮಳೆ ಸುರಿಯುತಿತ್ತು .ಜಂಬೊ  ಆನೆ , ಸ್ಟೈಲಿ ಸಿಂಹ , ಬೆಳಗಿನ ತಿಂಡಿ ಮುಗಿಸಿ , ಕೊಡೆ ಹಿಡಿದು ಶಾಲೆಗೇ ತೆರಳುತ್ತಿದ್ದವು .  ಹಾಗೆ ಹಾದಿ ನಡೆಯುತ್ತಿದ್ದಾಗ , ಯಾರೋ ದೂರದಲ್ಲಿ ಸಹಾಯಕ್ಕಾಗಿ ಕೂಗುತ್ತಿರುವುದು ಕೇಳಿತು. ಆನೆ ಸಿಂಹ ಗಳೆರಡೂ ಪರಸ್ಪರ ಒಬ್ಬರನೊಬ್ಬ ಮುಖ ನೋಡಿಕೊಂಡು , ಯಾರು ಸಹಾಯ ಅಪೇಕ್ಷಿಸುತ್ತಿದರೆ ಎಂದು ನೋಡಬೇಕೆಂದು , ಧ್ವನಿಯನ್ನೇ ಅರಸಿ ಅದು ಬರುತ್ತಿದ್ದ ದಿಕ್ಕಿನ ಕಡೆ ನಡೆದವು .

ಸ್ವಲ್ಪ ದೂರ ಹೋದ ಮೇಲೆ ಎದುರಿಗೆ ಇದ್ದ ಕೆಸರು ಗುಂಡಿಯಲ್ಲಿ ಯಾವದೋ ಮಂಗ ಬಿದ್ದಿರುವುದು ಕಂಡಿತು . ಹತ್ತಿರ ಹೋಗಿ ನೋಡಲು ಅರೆ ! ಇದು ನಮ್ಮ ಸಹಪಾಠಿ ಮೋಟು . ಮೋಟು ಇದೇನಾಯಿತು ನಿನಗೆ ಎಂದು ಜಂಬೊ ಕನಿಕರದಿಂದ ಕೇಳಲು . ಮರದಿಂದ ಮರಕ್ಕೆ ನೆಗೆಯುವ ವೇಳೆ ಆಯಾ ತಪ್ಪಿ ಕೆಸರು ಗುಂಡಿಯಲ್ಲಿ ಬಿದ್ದೆ . ಗುಂಡಿ ತುಂಬಾ ಆಳವಿದ್ದು ಮೇಲೆ ಬರಲು ಸಾಧ್ಯವಾಗುತ್ತಿಲ್ಲ. ನಾನು ಸತ್ತೇ ಎಂದು ಜೋರಾಗಿ ಅಳಲು ಶುರುಮಾಡಿತು .

ಯಾವಾಗಲೂ ಎಲ್ಲರನ್ನು ಹಂಗಿಸಿ , ರೇಗಿಸುತ್ತಿದ್ದ ಮೋಟು , ಇಂದು , ತನ್ನನ್ನು ಹೇಗೆದಾರು ಕೆಸರಿನಿಂದ ಹೊರಗೆ ತೆಗೆಯುವಂತೆ ಸ್ಟೈಲಿ ಮತ್ತು ಜಂಬೊವನ್ನು ಅಂಗಲಾಚಿತು. ಅದಕ್ಕೆ ಸಹಾಯ ಮಾಡ್ಬೇಕೆಂದು ಮನಸು ಇದ್ದರೂ  , ಹೇಗೆ ಮೋಟುವನ್ನು ಮೇಲೆ ಎಳೆಯುವುದು , ಎಂದು ತಿಳಿಯದು . ಅಷ್ಟು ದೊಡ್ಡ ದೇಹ ಇದ್ದರು , ಜಂಬೊ ಗೆ ಕೆಸರಿನಲ್ಲಿ ಇಳಿಯಲು ಭಯ, ಎಲ್ಲಿ ಕೆಸರಲ್ಲಿ ನಾನು ಹೂತುಹೋಗುವೆನೋ ಎಂದು . ಇನ್ನು ಜಂಬೊ ಧೈರ್ಯ ಮಾಡದೆ ಸಿಂಹ ಕ್ಕೆ ಏನು ಮಾಡಲು ತೋಚದು. ಆನೆ ಸಿಂಹ ಗಳೆರೆಡು ಬೆಪ್ಪಾಗಿ ಮೋಟುವನ್ನು ನೋಡುತ್ತಾ ನಿಂತವು

ಅಷ್ಟರಲ್ಲಿ ತನ್ನ ಪಾಡಿಗೆ ಸಿಳ್ಳೆ ಹೊಡೆಯುತ್ತ , ವಿಕ್ಕಿ ನರಿ ಶಾಲೆಗೇ ಅದೇ ದಾರಿಯಲ್ಲಿ ಸಾಗುತಿತ್ತು . ಆನೆ ,ಸಿಂಹ ಬೆಪ್ಪಾಗಿ ಕೆಸರಿನ ಗುಂಡಿಯ ಬಳಿ ನಿಂತಿರುವುದನ್ನು , ತನ್ನ ಕೊಡೆಯ ಅಂಚಿನಿಂದ ನೋಡಿದ ವಿಕ್ಕಿ, ಏನೋ ತೊಂದರೆ ಆಗಿರಬಹುದೆಂದು ಎಣಿಸಿ , ಅವೆರಡರ ಬಳಿಗೆ ಓಡಿತು . ಅಷ್ಟರಲ್ಲಿ ಮೋಟು ಮಂಗ ನ ಮುಕ್ಕಾಲು ಶರೀರ ಕೆಸರಿನಲ್ಲಿ ಸ್ವಲ್ಪ ಸ್ವಲ್ಪವೇ ಕುಸಿಯುತಿತ್ತು . ಇದನ್ನು ಕಂಡ ನರಿ ತಕ್ಷಣ , ಸುತ್ತ ಕಣ್ಣಾಡಿಸಿತು . ಅಲ್ಲೇ ಹತ್ತಿರದಲ್ಲೇ ಆಲದ ಮರವೊಂದಿತ್ತು . ತನ್ನ ಚಾಣಾಕ್ಷ ಬುದ್ದಿಯನ್ನು, ಚುರುಕುಗೊಳಿಸಿ , ಅದರ ಬೇರೆಗಳನ್ನು ಕತ್ತರಿಸಿ , ಅದರಿಂದ ಹಗ್ಗ ಹೊಸೆದು , ಮೋಟು ವನ್ನು ಹೊರಗೆ ತೆಗೆಯಬಹುದೆಂದು ಯೋಚಿಸಿತು .

ನರಿಯ ಸಮಯೋಚಿತ ಉಪಾಯಕ್ಕೆ ತಲೆದೂಗಿದ , ಸಿಂಹ ತನ್ನ ಚೂಪಾದ ಹಲ್ಲಿನಿಂದ, ಮರದ ಬೇರುಗಳನ್ನು ಕತ್ತರಿಸಿತು. ನರಿ ಅದನ್ನು ಹಗ್ಗದ ಹಾಗೆ ಹೊಸೆದು , ಒಂದು ಕೊನೆಯನ್ನು ಮೋಟುವಿನ ಕಡೆಗೆ ಎಸೆದು, ಇನ್ನೊಂದನ್ನು ಜಂಬೊವಿನ ಕಾಲಿಗೆ ಬಿಗಿಯಿತು. ಜಂಬೊ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಮೋಟುವನ್ನು ಎಳೆದು ಕೆಸರಿನಿಂದ ಹೊರಗೆ ಹಾಕಿತು .

ಬದುಕಿದೆಯಾ ಜೀವ ಎಂದು . ಮಂಗಾ ಪಿಳಿ ಪಿಳಿ ಕಣ್ಣು ಬಿಟ್ಟಿತ್ತು. ತನ್ನನ್ನು ಕಾಪಾಡಿದ , ಸಿಂಹ, ಆನೆ ಮತ್ತು ನರಿಗಳಿಗೆ , ಧನ್ಯವಾದ ಹೇಳಿತು .ತಾನೇ ಎಲ್ಲರಿಗಿಂತ ಮಿಗಿಲು ಎಂಬ ಅಹಂಕಾರ ಇಳಿದು, ಮೋಟು ಮಂಗಾ ಕುಗ್ಗಿದ.

ಸೋಮವಾರ, ಅಕ್ಟೋಬರ್ 9, 2017

Pebbe

ಹಿಮಕರಡಿ (ಪೆಬ್ಬೆ)

ಒಂದು ದಿನ ಹಿಮಕರಡಿ ಮರಿಯೊಂದು ತನ್ನ ಮನೆಯ ಮುಂದೆ ಸಪ್ಪೆ ಮುಖ ಮಾಡಿಕೊಂಡು ಕುಳಿತಿತ್ತು . ತನ್ನ ಅಣ್ಣ ಅಕ್ಕಂದಿರು ಎಲ್ಲ ಶಾಲೆಗೆ ತೆರಳಿದ್ದರು.  ಅಮ್ಮ ಮನೆಯಲ್ಲೇ ಇದ್ದರು , ಅಡುಗೆ ಮನೆಯಲ್ಲಿ ಅವಳಿಗೆ ಉಸಿರಾಡಲು ಪುರುಸೊತ್ತು ಇಲ್ಲದಷ್ಟು ಕೆಲಸ. ಆಟವಾಡಲು ಯಾರಾದರೂ ಸಿಗಬಹುದೇ ಎಂದು ದಾರಿ ನೋಡುತ್ತಾ ಕುಳಿತಿದ್ದ ಪೆಬ್ಬೆ. ಅಷ್ಟರಲ್ಲಿ ಅವನ ಅಮ್ಮ ಕರೆದದ್ದು ಕೇಳಿ , ಆಟವಾಡಲು ಕರೆಯುತ್ತಿದಾಳೆ ಎಂದು ಖುಷಿಯಲ್ಲಿ ಒಳಗೆ ಓಡಿತು .

ಸಂಜೆ ತಿಂಡಿ ಗೆ ಪಾಯಸ ಮಾಡುವಾದಾಗಿ ಯೋಚಿಸ್ಸಿದ್ದ ತಾಯಿ , ಮನೆಯಲ್ಲಿ ಸಕ್ಕರೆ ಖಾಲಿ ಯಾಗಿರಿವುದನ್ನು ನೋಡಿ , ಅದನ್ನು ತರಲು ಪೆಬ್ಬೆಯನ್ನು ಕರೆದಿದ್ದಳು . "ಪೆಬ್ಬೆ ಅಂಗಡಿ ಗೆ ಹೋಗಿ ಕೆಜಿ ಸಕ್ಕರೆ ತಾ, ನಿನ್ನ ಅಣ್ಣ ಅಕ್ಕ ಶಾಲೆ ಇಂದ ಬರುವು ವೇಳೆಗೆ ಪಾಯಸ ಮಾಡುವೆ , ಎಲ್ಲರು ತಿನ್ನುವ" ಎಂದು ಅದರ ಕೈಗೆ ಚೀಲ ಮತ್ತು ಹಣವನ್ನು ನೀಡಿದಳು . ಆಟವಾಡಲು ಕರೆಯುತ್ತಿದಾಳೆ ಎಂದು ನೆನೆಸಿದ ಪೆಬ್ಬೆಗೆ ತುಸು ನಿರಾಸೆ ಯಾದರು , ಅಂಗಡಿಗೆ ಹೋಗುವ ಕೆಲಸ ಮನೆಯ ಮುಂದೆ ದಾರಿ ಕಾಯುವುದಕ್ಕಿಂತ ಲೇಸು ಎನ್ನಿಸಿ , ಚೀಲ ಹಿಡಿದು ಅಂಗಡಿಯ ಕಡೆ ಹೊರಟಿತು .

ಹಿಮದಿಂದ ಆವರಿಸಿದ ಬೆಟ್ಟ ಗುಡ್ಡಗಳ ಹತ್ತಿ ಇಳಿಯುತ್ತ  ಸಾಗಿದ್ದ ಪೆಬ್ಬೆ ಇದ್ದಕ್ಕಿದ್ದ ಹಾಗೆ ಏನೆನ್ನೋ ನೆನಸಿಕೊಂಡು ಹಾಗೆ  ಹಿಂದೆ ತಿರುಗಿ ಅಲ್ಲೇ ಇದ್ದ ಹಿಮ ಸರೋವರವನ್ನು ನೋಡಿ ,ಅದರಲ್ಲಿ ಇರುವು ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ತಿನ್ನುವ , ನೀರಲ್ಲಿ ಆಟವಾಡುವ ಆಸೆಯಿಂದ ಕಿರುನಗೆ ಬೀರುತ್ತಾ ಅದರ ಕಡೆಗೆ ಹೆಜ್ಜೆ ಹಾಕಿತು . ಇನ್ನು ಸಣ್ಣವನಾಗಿದ್ದ ಪೆಬ್ಬೆಗೆ ಗೆ ಮೀನು ಹಿಡಿಯುವುದು ಅಷ್ಟು ಸರಿಯಾಗಿ ಬರುತ್ತಿರಲಿಲ್ಲ . ಅಲ್ಲದೆ ಸರೋವರದಲ್ಲಿ ಇರಬಹುದಾದ ದೊಡ್ಡ ಮೀನುಗಳಿಂದ ಪೆಬ್ಬೆ ಗೆ ಅಪಾಯವಾಗಬಹುದು ಎಂದು ಅದರ ಅಪ್ಪ ಅಮ್ಮ ಅದಕ್ಕೆ ಸರೋವರದಲ್ಲಿ ಮೀನು ಹಿಡಿಯಲು ಬಿಟ್ಟಿರಲಿಲ್ಲ. ಆದರೆ ಈಗ ಯಾರು ತಡೆಯವರು ಇಲ್ಲದ ಕಾರಣ , ಪೆಬ್ಬೆ ಸರೋವರದ ಕಡೆಗೆ ಹೋಗುವು ಮೀನು ಹಿಡಿಯುವ ಧೈರ್ಯ ಮಾಡಿದ್ದ

ತನ್ನ ಮನಸಿಗೆ ತೃಪ್ತಿ ಆಗುವಷ್ಟು ಸಮಯ ಪೆಬ್ಬೆ ನೀರಿನಲ್ಲಿ ಆಟವಾಡಿತು . ಕೊರೆಯುವ ಹಿಮ ಸರೋವರದಲ್ಲಿ ಮಿಂದೆದ್ದು ಖುಷಿ ಪಟ್ಟಿತ್ತು  . ನೀರಿನ ಆಳದಲ್ಲಿ ಈಜಿ ಕಂಡ ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ಗುಳುಂ ಎನಿಸಿತು . ತನ್ನ ಸಾಮರ್ಥ್ಯಕ್ಕೆ ತಾನೇ ಗರ್ವ ಪಡುತಾ, ಅಪ್ಪ ಅಮ್ಮ ಗೆ ಬುದ್ದಿ ಇಲ್ಲ , ನಾನು ಒಳ್ಳೆಯ ಬೇಟೆಗಾರ, ಈಜುಗಾರ, ಇಂದು ಮನೆಗೆ ಹೋದ ಮೇಲೆ ಎಲ್ಲರಿಗು ತನ್ನ ಆಟಗಳ ವರ್ಣನೆ ಮಾಡುವೆ ಎಂದು ಯೋಚಿಸಿಕೊಂಡು ನೀರಿನಲ್ಲಿ ಮುಳುಗೇಳುತ್ತಿತ್ತು . ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದ ಪೆಬ್ಬೆ , ದೊಡ್ಡ ಮೀನೊಂದು ತನ್ನ ಬಳಿ ಬರುವುದು ಕಾಣಲೇ ಇಲ್ಲ . ಇನ್ನೇನು ಆ ದೊಡ್ಡ ಮೀನು ಇದರ ಕಾಲಿಗೆ ಬಾಯಿ ಹಾಕುವಷ್ಟರಲ್ಲಿ , ಪೆಬ್ಬೆ ಎಚ್ಚೆತ್ತು ಮೇಲಕ್ಕೆ ಈಜಿತು . ಆದರೆ ಬಿಡದ ದೊಡ್ಡ ಮೀನು ಇದನ್ನು ಹಿಂಬಾಲಿಸಿ ತಿನಲ್ಲೂ ಯತ್ನಿಸ್ತು. ಆದ್ರೆ ಪೆಬ್ಬೆ ಅದೃಷ್ಟವಶಾತ್ ಹೇಗೋ ತಪ್ಪಿಸಿಕೊಂಡು ಜೀವಕ್ಕೆ ಜೀವ ಬಿಡುತ್ತ ಸರೋವರದಿಂದ ಮೇಲೆ ಓಡಿತು .

ಅಪ್ಪ ಅಮ್ಮ ನ ಮಾತನ್ನು ಕೇಳದೆ ವ್ಯರ್ಥ ಸಾಹಸಕ್ಕೆ ಹೊರಟಿದ್ದು ದೊಡ್ಡ ತಪ್ಪೆಂದು ಅರಿವಾಗಿ , ಇದು ಯಾವುದನ್ನು ಮನೆಯಲ್ಲಿ ಯಾರಿಗೂ ಹೇಳ್ಬಾರದು ಎಂದು ನಿರ್ಧರಿಸಿ ಅದೇ ಭಯದಲ್ಲಿ ಹೇಗೋ ಅಂಗಡಿಗೆ ತೆರಳಿ , ಸಕ್ಕರೆ ಖರೀದಿಸಿ , ಮನೆಗೆ ಸಾಗಿ ಅಮ್ಮನಿಗೆ ನೀಡಿತು . ಸಂಜೆ ಪಾಯಸ ತಿಂದು ಇನ್ನೇನು ಮಲುಗುವ ಸಮಯದಲ್ಲಿ , ಬೆಳ್ಳಿಗೆ ನಡೆದ ಎಲ್ಲ ಸಂಗತಿಗಳನ್ನು ಪೆಬ್ಬೆ ಅಮ್ಮನಲ್ಲಿ ಹೇಳಿತು , ಬೈಯ್ಯಬಹುದೆಂದು ನೆನಿಸಿದ್ದ ಪೆಬ್ಬೆಯ ಸಾಹಸಕ್ಕೆ ಖುಷಿ ಪಟ್ಟ ಅಮ್ಮ ಅದನ್ನು ತೋರ್ಪಡಿಸದೆ , ಮುಂದಿನ ಬಾರಿ ಒಬ್ಬನೇ ಸರೋವರದಲ್ಲಿ ಇಳಿಯಬಾರದೆಂದು ಆಣೆ ಮಾಡಿಸಿಕೊಂಡಳು .ಆಣೆ ಮಾಡಿದ ಪೆಬ್ಬೆ ಅಮ್ಮನ ಬಳಿ ಬೆಚ್ಚಗೆ ಮಲಗಿದ. 

ಗುರುವಾರ, ಜೂನ್ 15, 2017

Panchabootha

 ಪಂಚಭೂತಗಳು ಪ್ರಕೃತಿಯ ಮೂಲ ಧಾತುಗಳು .ಬ್ರಹ್ಮಾಂಡದ ಚರಾಚರಗಳು  ಪಂಚಭೂತಗಳಿಂದ ಆದದ್ದು .ಭೂಮಿ ಅಥವ ಪೃಥ್ವಿ ,ಜಲ ಅಥವ ನೀರು, ತೇಜಸ್ ಅಥವ ಬೆಂಕಿ,ಪವನ ಅಥವ ಗಾಳಿ, ಶೂನ್ಯ ಅಥವ ಆಕಾಶ  ಇವೆ ಆ ಐದು ಪಂಚ ಮಹಾಭೂತಗಳು . ಪಂಚಮಹಭೂತಗಳ ಸಿದ್ದಾಂತ  ಕೇವಲ ಭಾರತದಲ್ಲ  ಪುರಾತನ ಗ್ರೀಕ್, ಈಜಿಪ್ಟ್   ಮತ್ತಿತರ ರಾಷ್ಟ್ರಗಳ ತತ್ವಜ್ಞಾನಿಗಳು ಕೂಡ  ಇದರ ಬಗ್ಗೆ  ಪ್ರತಿಪಾದಿಸಿದ್ದಾರೆ .

ಪಂಚಭೂತಗಳು ವಿಷ್ಣುವಿನಿಂದ ಜನಿಸಿದವು  ಎಂದು ಪುರಾಣಗಳು ಹೇಳುತ್ತವೆ . ಹಿಂದೊಮ್ಮೆ , ವಿಷ್ಣು , ಶಿವನನ್ನು ಕುರಿತು  ತಪಸನ್ನು ಆಚರಿಸುತ್ತಿದ್ದ, ಶಿವನ ಆಶಿರ್ವಾದದಿಂದ ಅನೇಕ  ಪರ್ವತ ಶಿಕರ , ಜರಿ , ನದಿ ತೊರೆಗಳು , ವಿಷ್ಣುವಿನ ದೇಹದಿಂದ  ಜನ್ಮ ತಾಳಿದವು . ನಂತರೆ ವಿಷ್ಣುವಿನ ದೇಹದಿಂದ, ಮೂರು ಗುಣಗಳು , ಪಂಚಭೂತಗಳು, ಕೊನೆಯಲ್ಲಿ ಪಂಚ ಜ್ಞಾನೇಂದ್ರಿಯ ಗಳು ಪ್ರಕಟವಾದವು . ಆತ್ಮನಿಂದ  ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಬೆಂಕಿ, ಬೆಂಕಿಯಿಂದ ನೀರು ಮತ್ತು ಎಲ್ಲ ೪ ಧಾತುಗಳಿಂದ ಭೂಮಿಯಾ ಸೃಷ್ಟಿಯಾಯಿತು . ವೇದಾಂತ ಪುರಾಣಗಳ  ಪ್ರಕಾರ , ಮನಷ್ಯನ ಪಂಚೇಂದ್ರಿಯಗಳು ಪಂಚಭೂತಗಳಿಂದ ಆವಿಷ್ಕರವಾಯಿತು .  ಆಕಾಶದಿಂದ ಕಿವಿ , ವಾಯುವಿನಿಂದ  ಚರ್ಮ, ಅಗ್ನಿಯಿಂದ ಕಣ್ಣು, ನೀರಿನಿಂದ ನಾಲಿಗೆ ಮತ್ತು ಭೂಮಿಯಿಂದ ನಾಸಿಕ ಹೊರಹೊಮ್ಮಿತು

ಪುರಾಣಗಳು , ಉಪನಿಷತ್ತುಗಳ ಜೊತೆ , ಆಯುರ್ವೇದ ಕೂಡ ಪಂಚ ಭೂತಗಳ ಮಹತ್ವವನ್ನು ಹೇಳುತ್ತದೆ .ಇದರ ಪ್ರಕಾರ , ಮನುಷ್ಯನಮರಣಾನಂತರ ಅವನ ದೇಹ ಪಂಚಭೂತಗಳಲ್ಲಿ ಲೀನವಾಗುತ್ತದೆ. ಇದು ಪ್ರಕೃತಿಯ ಸಮತೋಲನದ ಗುಟ್ಟು . ಆಯುರ್ವೇದದ ಪ್ರಕಾರ  ಮನುಷ್ಯನ ಆರೋಗ್ಯ ಕೂಡ ಪಂಚಭೂತಗಳಿಂದ ನಿಯಂತ್ರಿಸಲ್ಪಡುತ್ತದೆ . ದೇಹದ ಯಾವುದೇ ರೀತಿಯ ಅಸ್ವಸ್ಥೆ ಗೆ , ಪಂಚಭೂತಗಳ ಅಸಮತೊಲನವೆ ಕಾರಣ. ಆಯುರ್ವೇದದಲ್ಲಿ ಹೇಳುವ ವಾತ ಪಿತ್ತ , ಕಫ ದೋಷಗಳು , ಪಂಚಭೂತಗಳ ಪ್ರಾತಿನಿದ್ಯ .ಇನ್ನು ಪ್ರಾಚಿನ ಹಸ್ತ  ಮುದ್ರ ಕೂಡ ಪಂಚಭೂತಗಳ ಸಿದ್ಧಾಂತದಿಂದ ಆದ  ಜ್ಞಾನ . ಹಸ್ತ ಮುದ್ರಿಕೆಯ ಪ್ರಕಾರ ಹೆಬ್ಬೆರಳು ಅಗ್ನಿಯನ್ನು , ತೋರುಬೆರಳು ವಾಯುವನ್ನು, ಮದ್ಯಬೆರಳು ಆಕಾಶವನ್ನು ,ಉಂಗುರ ಬೆರಳು ಪ್ರುಥ್ವಿಯನ್ನು ಮತ್ತು ಕಿರು ಬೆರಳು ನೀರನ್ನು ಪ್ರತಿನಿದುಸುತ್ತದೆ

ದಕ್ಷಿಣ ಭಾರತದಲ್ಲಿ , ಪಂಚಭೂತಸ್ಥಳಂ ಎಂದು ಕರೆಯಲ್ಪಡುವ ಶಿವನ  ೫ ಬೇರೆ ಬೇರೆ ದೇವಸ್ಥಾನಗಳಿವೆ . ಈ ೫ ದೇವಸ್ಥಾನಗಳು ಪಂಚಬೂತಗಳನ್ನು  ಪ್ರಥಿನಿದಿಸುತ್ತವೆ. ಕಂಚಿಪುರಂನ ಎಕಾಮ್ಬರೆಶ್ವರ ದೇವಸ್ಥಾನ , ತ್ರಿಚಿಯ ಜಂಬುಕೇಶ್ವರ, ತಿರುವನಮಲೈ ನ ಅರುಣಾಚಲೇಶ್ವರ, ಕಳಹಸ್ತಿಯ ಶ್ರೀ ಕಾಳಹಸ್ಥೆಶ್ವರ ಮತ್ತು ಚಿದಂಬರಂನ ತಿಳ್ಳಿನಟರಾಜ ದೇವಸ್ಥಾನ .

ನಮ್ಮ ದೇಹದಂತೆ ಮನ್ಸಸ್ಸು ಕೂಡ ಪಂಚಭೂತಗಳ ಅತಿ ಸೂಕ್ಧ್ಮ ರೂಪದಿಂದ  ಆದದ್ದು . ಹಾಗಾಗಿ ಯಾವ ಪಂಚಭೂತ ಪ್ರಧಾನವಾಗಿರತ್ತೊದೋ ,ಮನುಷ್ಯನು ಅದೇ ರೀತಿಯ ವಿವಿದ ಮನಸ್ಥಿತಿ ಮತ್ತು ಭಾವಪರವಶತೆ ಯನ್ನು ಅನುಭವಿಸುತ್ತಾನೆ . ಉಧಾಹರಣೆಗೆ ಹೇಳುವುದಾದರೆ , ಪ್ರುಥ್ವಿಯು  ಪ್ರಬಲವಾದಾಗ ಆರಾಮದ ಅಥವ ಅಸ್ವಸ್ಥೆಯ , ಮತ್ತು ಮನಸೀನ ಭಾರವಾದ ಸ್ತಿತಿ, ಅದೇ ರೀತಿ ವಿಹರಿಸುತ್ತಿರುವ, ತೇಲುತಿರುವ ಮನಸಲ್ಲಿ  ನೀರಿನ  ,ಮುಂದೆ ನಡೆಯುವ ಅಥವ  ಸನ್ನಿವೇಶಗಳಿಂದ ಓಡಿ ಹೋಗಬೇಕು ಎಂದೆನಿಸುವ ಸಮಯಗಳ್ಳಲ್ಲಿ ಗಾಳಿಯಾ  , ಸಾಧಿಸುವ ಛಲ ,ರೋಷ , ಬೆಂಕಿಯ , ಮತ್ತು ಪೂರ್ಣತೆಯ ,ಹಗುರತೆಯ  ನಮ್ಮನ್ನು  ಸುತ್ತುವರೆದಾಗ ಮನಸ್ಸು ಆಕಾಶದ ಅಧೀನದಲ್ಲಿರುತ್ತದೆ . ಪಂಚಬೂತಗಳು   ನೇರವಾಗಿ ನಮ್ಮ ಮನಸನ್ನು ನಿಯಂತ್ರಿಸುತ್ತವೆ ಹಾಗಾಗಿ ಜ್ಞಾನಿಗಳು , ಋಷಿಮುನಿಗಳು ಮೂಲವಸ್ತುಗಳ ನಿಗ್ರಹಕ್ಕೆ , ಹತೋಟಿಗೆ ಯೋಗ ಧ್ಯಾನ ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು . ಯೋಗದ ಅಂತಿಮ,ಕಟ್ಟ ಕಡೆಯ ಉದ್ದೇಶ ಬೂತಶುದ್ದಿ - ಅಂದರೆ ಪಂಚಭೂತಗಳನ್ನು ಚೊಕ್ಕಟಗೊಲಿಸುವ  ಕೆಲಸ .ಹಾಗಾಗಿ ಶಾಂತಿ , ಸಮ್ರುದ್ದಿ ಮತ್ತು ಚಿರಂತನವಾದ ನೆಮ್ಮದಿಯ ಜೀವನ ನಮ್ಮದಾಗಬೇಕಾದರೆ ಪಂಚಬೂತಗಳ ಪ್ರಾಮುಖ್ಯತೆ ಹಾಗು ಅದರ ಮಾರ್ಮಿಕ ಫಲ ಪರಿಣಾಮಗಳ ಬಗೆಗಿನ ತಿಳುವಿಕೆ ತುಂಬ ಮುಖ್ಯ .




ಶನಿವಾರ, ಜುಲೈ 25, 2015

Thriguna

 ಮನುಷ್ಯನ  ದೇಹ ಪಂಚಭೂತಗಳಿಂದಾದ್ದು . ಮನುಷ್ಯನ ಮನಸ್ಸು ಗುಣಗಳಿಂದ ನಿಯಂತ್ರಿಸಲ್ಪಡುತ್ತದೆ . ಮಾನವನ  ಶಕ್ತಿ ಮೂರು ಗುಣಗಳಲ್ಲಿ ಹಂಚಿಹೊಗಿವೆ .ತಮಸ್ಸು , ರಜಸ್ಸು ಮತ್ತು ಸಾತ್ವಿಕ ಎಂಬುದೇ ಈ ಮೂರು ಗುಣಧರ್ಮಗಳು .  ಹಿಂದೂ ಸಂಸ್ಕೃತಿಯ  ದೇವರುಗಳಾದ , ,ಬ್ರಹ್ಮ ,ವಿಷ್ಣು ,ಮಹೇಶ್ವರರು  ವಿಭಿನ್ನ ಗುಣಗಳ ಸ್ವರೂಪ . ಬ್ರಹ್ಮನು  ರಜೋ ಗುಣದ ವಿಷ್ಣು ಸಾತ್ವಿಕ ಗುಣದ ಮತ್ತು ಶಿವನು ಎಲ್ಲ ಗುಣಗಳ ಪ್ರತಿರೂಪ . ವ್ಯಕ್ತಿಯ ವ್ಯಕ್ತಿತ್ವದ ಮೇಲೆ  ಈ ಮೂರು ಗುಣಗಳು ಪ್ರಭಾವ ಬೀರುತ್ತವೆ . ತಮೋ ಗುಣ ಜಡತ್ವದ , ರಜೋ ಗುಣ ಶಕ್ತಿ, ತೀವ್ರತೆಯಾ ಹಾಗು ಸಾತ್ವಿಕ ಗುಣ ಬೆಳಕಿನ , ಪರಿಶುದ್ದತೆಯ ಸಂಕೇತ .ಭೂಮಿಯ ಮೇಲಿರುವ ಎಲ್ಲ ವಸ್ತುಗಳು ,ಜೀವಿಗಳನ್ನು ಈ ಮೂರು ಗುಣದ ಆದರದ ಮೇಲೆಯೂ ವಿಂಗಡಿಸಬಹುದು

ಅಂಧಕಾರ ಕತ್ತಲೆಯ ಪ್ರತಿರೂಪವಾದ ತಮಸ್ಸು ಮಾಯೆ,ಉದಾಸೀನತೆ , ವಿನಾಶ, ಸಾವು, ಜಡತ್ವ, ಆಲಸ್ಯವನ್ನು ಪ್ರೋತ್ಸಾಹಿಸುವ ಶಕ್ತಿ .  ಪ್ರಪಂಚದ ಸೃಷ್ಟಿಯಲ್ಲಿ ತಮಸ್ಸು ರಾಕ್ಷಸೀ ಗುಣ .  ರಾಕ್ಷಸರಲ್ಲಿ ಮನೆಮಾಡಿರುವ ಗುಣ . ತಮೋಗುಣ ಹೆಚ್ಚಾದಂತೆಲ್ಲ ಮನುಷ್ಯ ತನ್ನ ದಿನಗಳ ಹೆಚ್ಚಿನ ಸಮಯ ನಿದ್ದೆ ಯಲ್ಲಿ ಕಳೆಯುತ್ತಾನೆ , ಕೆಲಸದ ಮೇಲಿನ ಅವನ ಶ್ರದ್ದೆ ,  ಆಸಕ್ತಿ ಕಡಿಮೆ ಆಗುತ್ತದೆ . ಈ ರೀತಿಯ ಅನುಭುವ ಪ್ರತಿಯೊಬ್ಬರಿಗೆ ಕೆಲವೊಮ್ಮೆ , ಕೆಲವೊಂದು ದಿನ ಆಗಬಹುದು . ಆದರೆ ಈ ಆಲಸ್ಯ ಪ್ರತಿದಿನದ ಮಾತಾಗುವುದು  ಒಳ್ಳೆಯ ಲಕ್ಷಣವಲ್ಲ . ಹೆಚ್ಚಿನ ತಾಮಸಕ್ಕೆ ಶರಣಾದ ವ್ಯಕ್ತಿ , ತನ್ನ ಕೆಲಸಗಳನ್ನು ಪ್ರತಿ ದಿನ ಮುಂದೂಡುತ್ತಾ ಬರುತ್ತಾನೆ ಇದರಿಂದ ಅಪಜಯ ಅವನದಾಗುತ್ತದೆ , ಖಿನ್ನತೆಗೆ ಒಳಗಾಗುತ್ತಾನೆ , ತನ್ನನ್ನು ತಾನೆ ಹಳಿಯುತ್ತಾ ಆತ್ಮಹತ್ಯೆಗೆ ಶರಣಾಗುತ್ತಾನೆ .  ಅರಿವಿಗೆ ಬರದಂತೆಯೇ , ತಮೋಗುಣ ಅವನ ಸುಂದರ ಜೀವನವನ್ನು ಕಬಳಿಸುತ್ತದೆ . ಎಲ್ಲೆ ಮೀರಿದ ,ತಮೋ ಗುಣವನ್ನು ಯಾವುದೇ  ಆಯುಧದಿಂದ ದಂಡಿಸಲು ಸಾಧ್ಯವಿಲ್ಲ , ಇದರ ನಿಗ್ರಹಕ್ಕೆ ಇರುವ ಒಂದೇ ಮಾರ್ಗ ಸುಪ್ತವಾಗಿರುವ ಸಾತ್ವಿಕ ಗುಣವನ್ನು ಹೆಚ್ಚಿಸಿಕೊಳ್ಳುವುದು .

 ಇನ್ನು ಚುರುಕುತನದ ಪ್ರತೀಕವಾದ ರಜೋ ಗುಣ ಉಳಿದೆರಡು ಗುಣಗಳನ್ನು ಬೆಂಬಲಿಸುವನ್ತದ್ದು . ಅತಿ ಹೆಚ್ಚು  ಚುರುಕುತನ,ಉತ್ಸುಕತೆ ಮತ್ತು ಭಾವೋದ್ವೇಗ ರಜೋ ಗುಣದ ಮುಖ್ಯ ಲಕ್ಷಣಗಳು . ರಜೋ ಗುಣ ತಮಸ್ಸಿಗಿಂತ ಧನಾತಮ್ಕ  ಸಾತ್ವಿಕಕಿಂತ ಋಣಾತ್ಮಕ . ನಾವು ನೋಡಿರಬಹುದು ಕೆಲವು ವ್ಯಕ್ತಿಗಳು , ಒಂದು ಕ್ಷಣಕ್ಕಾದರೂ ಒಂದು ಕಡೆ ಸ್ಥಿರವಾಗಿ ನಿಲ್ಲಲಾರರು , ಅವರ  ಮನಸ್ಸು ಯಾವಾಗಲು , ನೂರಾರು ಯೋಚನೆ, ಯೋಜನೆ, ಆಲೋಚನೆಗಳ ಮಳೆಯಲ್ಲಿ ತೊಳಲಾಡುತಿರುತ್ತದೆ .ಇದು ಇನ್ನು ಮಿತಿಮೀರಿ  ಗೊಂದಲಕ್ಕೆ ಒಳಗಾಗುತ್ತಾರೆ . ಮನದೊಳಗಿನ ಗೊಂದಲಗಳು ,ಮುಂಗೊಪಿತನ ,ಆಕ್ರಮಣ ರೂಪತಾಳಿ, ಕ್ರೌರ್ಯಕ್ಕೆ ತಿರುಗತ್ತದೆ . ಜೀವನದಲ್ಲಿ ಎಲ್ಲವನ್ನು ಸಾಧಿಸುವ ಶಕ್ತಿ ಇವರುಗಳಿಗೆ ಇದ್ದರು ಮಿತಿಮೀರಿದ  ರಜೋ ಗುಣದ ಪ್ರಭಾವದಿಂದ ಜೀವನ ವ್ಯರ್ಥವಾಗುತ್ತದೆ .

 ಅಪರೂಪವಾದ ಗುಣ , ಸತ್ವ ಗುಣ.ಸತ್ವ ಗುಣದಿಂದ ಕೂಡಿದ ವಸ್ತು , ವ್ಯಕ್ತಿ ತನ್ನ ಬಾಹ್ಯ ಮತ್ತು ಅಂತರಿಕ ಜಗತ್ತನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾನೆ  . ಸಾತ್ವಿಕತೆಯನ್ನು ಮೈಗೂದಿಡಿಕೊಂಡ ವ್ಯಕ್ತಿ ತನ್ನ ಸುತ್ತಮುತ್ತಲಿನ, ಜನ , ಪರಿಸರವನ್ನು ಸದಾ, ಒಳ್ಳೆಯ ರೀತಿಯಲ್ಲಿ ಕಾಣುತ್ತಾನೆ .  ಹೂವು , ಹಣ್ಣು , ದೇವರಿಗೆ  ಸಮರ್ಪಿಸುವ ನೈವೇದ್ಯ ಎಲ್ಲ ಸಾತ್ವಿಕತೆಯ ರೂಪಗಳು  . ಒಂದು ಸುಂದರವಾದ , ಹೂವನ್ನು   ಕಂಡಾಗ ನಮ್ಮ  ಮನಸಿನಲ್ಲಿ ಉಂಟಾಗುಗುವ ಆಹ್ಲಾದತೆಯ ಅನುಭವವೇ ಸಾತ್ವಿಕ ಗುಣ. ಸಾತ್ವಿಕ ಮನಸ್ಸು ಸದಾ ಪ್ರಶಾಂತ , ಸ್ಥಿರ ,ಸುಖಪ್ರದ .ಸಾತ್ವಿಕ ವ್ಯಕ್ತಿಗಳು ಸದಾ ಪ್ರಪಂಚದ , ಒಳಿತಿಗಾಗಿ ಚಿಂತಿಸುವವರು , ಅದಕ್ಕಾಗಿ ದುಡಿಯವವರು, .  ಅವರ ಆಹಾರ,ಉಡುಗೆ ತೊಡುಗೆ ಮಾತು ಎಲ್ಲ ಹಿತ ಮಿತವಾದದ್ದು . ವಿಚಾರ ಮೆಲುಸ್ತರದ್ದು . ತುಳಸಿದಾಸರು, ತ್ಯಾಗರಾಜರು, ರಮಣ  ಮಹರ್ಷಿಗಳು, ಪರಮಹಂಸರು, ಸ್ವಾಮಿ ವಿವೇಕಾನಂದರು ಇವರೆಲ್ಲ ಸಾತ್ವಿಕ ಗುಣಕ್ಕೆ ಇನ್ನೊಂದು ಹೆಸರು . ಎಲ್ಲದರಲ್ಲೂ ಸುಂದರತೆಯನ್ನು,ಸತ್ಯತೆಯನ್ನು ಕಾಣುವ, ಕಿಚ್ಚು ದ್ವೇಷ ,ಅಸೂಯೆಗಳಿಂದ ವಿಚಲಿತರಾಗದವರೆ ಸಾತ್ವಿಕ ಪುರುಷರು .

ಮೂರು ಗುಣಗಳಲ್ಲಿ ಒಂದು ಗುಣವನ್ನು ಒಳ್ಳೆಯದು,ಇನ್ನೊಂದನ್ನು ಕೆಟ್ಟದ್ದು ಎಂದು ವಿಂಗಡಿಸಿ ಭೆರ್ಪಡಿಸಲು ಸಾಧ್ಯವಿಲ್ಲ . ತಮಸ್ಸು ಇಲದೆ ನಿದ್ರೆ ಇಲ್ಲ , ರಜಸ್ಸು ಇಲ್ಲದೆ ಚಟುವಟಿಕೆ ಇಲ್ಲ.ಸಾತ್ವಿಕ ಗುಣ ಮೆಲುಸ್ತರದ್ದು , ಅದನ್ನು ಹೆಚ್ಚಿಸಿ, ಉಳಿದೆರಡು  ಗುಣಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು .ಸಾತ್ವಿಕತೆ ಹೆಚ್ಚಿ,ತಮೋ ರಜೋ ಗುಣಗಳು ಸಮತೊಲನದಲ್ಲಿದ್ದಾಗ, ಮನಸ್ಸು ಪ್ರಫುಲ್ಲ, ಸ್ಥಿರ. ಆತ್ಮ ಆಹ್ಲಾದಮಯ ,ಜೀವನ ಸಾರ್ಥಕ .




ಗುರುವಾರ, ಜುಲೈ 23, 2015

yoga

ಜೂನ್ ೨೧, ೨೦೧೫ ರಂದು ಅಂತರಾಷ್ಟ್ರೀಯ ಯೋಗ ದಿನವನ್ನು  ಆಚರಿಸಲಾಯಿತು . ೧೯೨ ರಾಷ್ಟ್ರಗಳು ಯೋಗಾಸನದ ಅಭ್ಯಾಸದಲ್ಲಿ ಭಾಗವಿಸಿದ್ದವು . ೫೦೦೦ ವರ್ಷಗಳಷ್ಟು  ಹಿಂದೆ ಭಾರತದಲ್ಲಿ ಉಗಮವಾದ ಯೋಗದ ಏಕೈಕ ಗುರಿ ಆತ್ಮ ಮತ್ತು ಪರಮಾತ್ಮನ ಮಿಲನದ ಅನುಭವ . ಯೋಗ ಮನುಷ್ಯನ ಮಾನಸಿಕ ,ಭೌದ್ಧಿಕ ಮತ್ತು ಆದ್ಯಾತ್ಮಿಕ ಅಭ್ಯಾಸ .  ಜೂನ್ ೨೧ನ್ನೇ ಯೋಗ ದಿನವೆಂದು ಗುರಿತುಸುವುದರ ಹಿಂದೆ ಅನೇಕ ಕಾರಣಗಳಿವೆ  . ಭೂಮಿಯ ಉತ್ತರಾರ್ಧ ಗೋಳದ ಅತ್ಯಂತ ಧೀರ್ಘವಾದ ದಿನ,ದಕ್ಷಿಣಾಯಣ ಸಂಧಿ ಕಾಲ . ಜಗದ ಆದಿಗುರು, ಆದಿಯೋಗಿ ಶಿವನು ದಿನ ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದನೆಮ್ಬುದು ಇನ್ನೊಂದು ನಂಬಿಕೆ 

ಯೋಗದ ಹುಟ್ಟು ಎಂದು , ಯಾರಿದರ ಕರ್ತ್ರು ಎಂಬುದರ ಬಗ್ಗೆ ಯಾವುದೇ ನಿಖರ ಮಹಿತಿಗಳಿಲ್ಲ . ಇತಿಹಾಸ ಕಾರರ ಪ್ರಕಾರ ಇದು ವೇದ ಕಾಲಕಿಂತಲೂ ಹಳೆಯದು .ಈಗ ಪ್ರಚಲಿತದಲ್ಲಿರುವ ಪತಂಜಲಿ ಯೋಗ ತೀರೇ ಇತ್ತೀಚಿನದು . ಇದು ೧ ನೆ ಶತಮಾನಕ್ಕೆ ಸೇರಿದ ಗ್ರಂಥ .  ಕೇವಲ  ನಮ್ಮ ದೇಶಕ್ಕೆ ಸೀಮಿತವಾಗಿದ್ದ ಯೋಗಬ್ಯಾಸವನ್ನು ವಿಶ್ವಕ್ಕೆ ಪರಿಚಯಿಸಿದ  ಮೊದಲ ಭಾರತಿಯ ಸ್ವಾಮಿ ವಿವೇಕಾನಂದರು  .ಇವರ ನಂತರ ಅನೇಕ ಆಧ್ಯಾತ್ಮಿಕ ಗುರುಗಳು , ಯೋಗಿಗಳು ಈ ಪರಂಪರೆಯನ್ನು  ಮುಂದುವರೆಸುತ್ತಿದ್ದಾರೆ . ೧೯  ನೆ ಶತಮಾನದಲ್ಲಿ ಕೇವಲ ದೈಹಿಕ ವ್ಯಾಯಾಮವಾಗಿ ವಿಶ್ವದೆಲ್ಲೆಡೆ ಪ್ರಸ್ಸಿದಿಯಾದ ಯೋಗ ಭಾರತದಲ್ಲಿ ಮಾತ್ರ ಕೇವಲ ವ್ಯಾಯಮವಲ್ಲ . ಅದು  ಧ್ಯಾನ ಮತ್ತು ಆಧ್ಯಾತ್ಮಿಕತೆಯ ಸತ್ಹ್ವಾಂಶ . 

ವೇದಗಳು ಹಳೆಯದಾಯಿತು ,ಉಪನಿಷತ್ತು ಮತ್ತು ಗ್ರಂಥಗಳ  ಬಳಕೆ ಕಡಿಮೆ ಆಯಿತು .  ಹೊಸ ನೀರು ಬಂದು ಹಳೆ ನೀರು ಕೊಚ್ಚಿ ಹೋಗುವಂತೆ ಕಾಲದೊಂದಿಗೆ ಭಾರತದಲ್ಲಿ ಹುಟ್ಟಿದ ಕಲೆ-ಸಂಸ್ಕೃತಿ ,ಆಚರ -ವಿಚಾರ , ಸಂಪ್ರದಾಯ , ಕಟ್ಟಲೆಗಳು ಮೂಲೆಗುಂಪಾದವು  ಪುರಾತನ ನಂಬಿಕೆಗಳನ್ನು ,  ಪ್ರಯೋಜನಕ್ಕೆ ಬಾರದ ವಿಷಗಳು ಎಂದು  ಮೂಗು ಮುರಿಯುವ ಯುವಜನ , ಯೋಗಬ್ಯಾಸವನ್ನು ಮಾತ್ರ ನಂಬುತ್ತಾರೆ,ಗೌರ್ರವಿಸುತ್ತರೆ , ಅನುಸರಿಸುತ್ತಾರೆ  . ಇಷ್ಟು ವರ್ಷ ಕಳೆದರು ಯೋಗ ಇಂದಿಗೂ ಪ್ರಸ್ತುತ 

ಆರೋಗ್ಯವೇ ಭಾಗ್ಯ . ಯೋಗ ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ  ಅವಶ್ಯಕ .  ಪ್ರತಿಯೊಬ್ಬ ಮನುಷ್ಯನಿಗೂ  ತನ್ನ ಜೀವನದ ಪ್ರತಿ ಘಟ್ಟದಲ್ಲೂ ಯೋಗ  ಸಹಾಯಕ್ಕೆ ಬರುತ್ತದೆ  ಯೋಗಭ್ಯಾಸದಲ್ಲಿ ತೊಡಗಿಸಿಕೊಂಡ ವ್ಯಕ್ತಿಗೆ  , ಶಿಸ್ತು  ಸಂಯಮ,ಆರೋಗ್ಯ,  ಸ್ಥಿರ ಮನಸ್ಸು , ಚುರುಕಾದ ಬುದ್ಧಿ ತಾನಾಗಿಯೇ ಬರುತ್ತದೆ . ಹೃದ್ರೋಗ,ಅಸ್ತಮಾ ಕ್ಯಾನ್ಸರ್ ಮುಂತಾದ ಖಾಯಿಲೆಗಳ ನಿಗ್ರಹಕ್ಕೆ ಯೋಗ ಪರಿಣಾಮಕಾರಿ . ಪ್ರಾಣಯಾಮ , ಧ್ಯಾನ ಮತ್ತು ಯೋಗದ ಅಭ್ಯಾಸದಿಂದ ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲಾಗುವ ಅಥ್ಯದ್ಭುಥ ಪರಿಣಾಮಗಳನ್ನು ವೈದ್ಯರು , ಮನೋವಿಜ್ಞಾನಿಗಳು ಕೂಡ ಪುಷ್ಟಿಕರಿಸುತ್ತಾರೆ. ವಿಧ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು , ಯುವಕರಲ್ಲಿ ಮಾನಸಿಕ ಸ್ಥಿರತೆಯನ್ನು , ವಯಸ್ಕರಲ್ಲಿ ಸಾಧಿಸುವ ಛಲ ಮತ್ತು ತಾಳ್ಮೆಯನ್ನು  ಹಾಗು ವೃದ್ದಾಪ್ಯದಲ್ಲಿ ಅತ್ಯಂತ ಅವಶ್ಯಕವಾದ ಮಾನಸಿಕ ನೆಮ್ಮದಿ ಮತ್ತು ಆರೋಗ್ಯವನ್ನು ಯೋಗ ನೀಡುತ್ತದೆ . 

ಇಷ್ಟೆಲ್ಲಾ  ಪ್ರಯೋಜನಕಾರಿಯಾದ ಯೋಗಾಭ್ಯಾಸ ಪ್ರತಿಯೊಬ್ಬರ ಜೀವನದಲ್ಲಿ ದಿನಚರಿಯಾಗಿ ಇರದಿರುವುದು ವಿಷಾದಕರ.ಕೇವಲ ಖಾಯಿಲೆ ಬಂದಾಗ, ಖಿನ್ನತೆ ಗೆ ಒಳಗಾದಾಗ , ಸ್ಥೂಳಕಾಯರಾದಾಗ , ವೈದ್ಯರ ಸಲಹೆಯಾ ಮೇರೆಗೆ ಯೋಗಾಸನದ ಕಡೆಗೆ ಮುಖ ಮಾಡುವವರು ಅದನ್ನು ದಿನಚರಿಯ ಭಾಗವಾಗಿ ಅಭ್ಯಸಿಸಬೇಕು , ಅನುಸರಿಸಬೇಕು . ಯೋಗದ   ಮಹತ್ವ ವನ್ನು  ಅರಿತ ಅದೆಷ್ಟೋ ಬಹುದೆಶಿಯ ಕಂಪನಿ ಗಳು ತಮ್ಮಲ್ಲಿ  ಕೆಲಸ ಮಾಡುವ ಉದ್ಯೋಗಿಗಳಿಗೆ , ಆಗಿನ್ದಾಗೆ ಯೋಗಾಭ್ಯಾಸದ ಕಾರ್ಯಾಗಾರಗಳನ್ನು ,ತರಗತಿಗಳನ್ನು ನಡೆಸುತ್ತದೆ. ಇದರ ಹಿಂದಿರುವ ಉತ್ತಮ , ಉದ್ದೇಶ ನೌಕರರ ದೈಹಿಕ,ಮಾನಸಿಕ ,ಆರೋಗ್ಯ ವೃದ್ದಿ ಅದರಿಂದ ಹೆಚ್ಚುವ ಕಾರ್ಯ ಕ್ಷಮತೆ .ಇದನ್ನು ನಮ್ಮ ಸರ್ಕಾರಿ ಕಛೇರಿಗಳಲ್ಲಿ , ಶಾಲಾ ಕಾಲೆಗುಗಳಲ್ಲಿ ರೂಡಿಸಿಕೊಳ್ಳಬೇಕು  .ಹಳ್ಳಿಯ ಜನ ಶ್ರಮಿಕರು ,  ಪಟ್ಟಣ ದ ಜನರ ಜೀವನ ಶೈಲಿಗೆ ಮಾತ್ರ ಯೋಗದ ಅವಶ್ಯಕತೆ ಇದೆ ಎಂದು ವಾದಿಸುವುದು ಅವೈಜಾನಿಕ . ಕೇವಲ ಕೆಲವು ವಯಸ್ಸಿನ , ಧರ್ಮದ, ಜಾತಿಯ, ಜನಾಂಗದ , ಪ್ರದೇಶದ ಜನರಿಗೆ ಮಾತ್ರ ಯೋಗದ ಅವಶ್ಯಕತೆ ಇದೆ ಎಂಬುದು ತಪ್ಪು ಕಲ್ಪನೆ .ಮಾನಸಿಕ ದೈಹಿಕ ಆರೋಗ್ಯ ಪ್ರತಿಯೊಬ್ಬರ ಹಕ್ಕು,ಅದನ್ನು ಕಾಪಾಡಿ ಕೊಳ್ಳುವುದು ನಮೆಲ್ಲರ ಕರ್ತವ್ಯ .  
ಯೋಗ ಕೇವಲ ಒಂದು ದಿನದ ಅಬ್ಯಾಸವಲ್ಲ , ಪ್ರತಿನಿತ್ಯ ಮಾಡುವುದೇ ಯೋಗಬ್ಯಾಸ . ಯೋಗ ನಮ್ಮ ಹಿರಿಯರು, ಯೋಗಿಗಳು ,ಚಿಂತಕರು, ತತ್ವಜ್ಞಾನಿಗಳ ನಮಗಾಗಿ ಬಿಟ್ಟು ಹೋಗಿರುವ ಪರಂಪರೆ. ಅದನ್ನು ನಮ್ಮ ದಿನನಿತ್ಯದ ಜೀವನದಲ್ಲಿ ರೂಡಿಸಿಕೊಳ್ಳುವುದರ ಬಗ್ಗೆ ಚಿಂತನೆ ನಡೆಸೋಣ .